Saturday, December 10, 2011

ನಮ್ಮೂರು ಕಾರ್ಕಳ............

ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಧ್ಯದಲ್ಲಿ ರಾರಾಜಿಸುವ ಉಡುಪಿ ಜಿಲ್ಲೆಯು ತನ್ನದೇ ಆದ ವೈಶಿಷ್ಟ್ಯ ಪೂರ್ಣ ಸ್ಥಾನಮಾನವನ್ನು ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಭಜನೆಯಿಂದ 1997ರಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಜಿಲ್ಲೆಯೇ ಉಡುಪಿ. ಪ್ರಮುಖ ಶೈಕ್ಷಣಿಕ ಕ್ಷೇತ್ರ ಬ್ಯಾಂಕಿಂಗ್ ಕ್ಷೇತ್ರ, ಸಾಂಸ್ಕೃತಿಕ ಜಗತ್ತಿಗೆ ತನ್ನದೇ ಆದ ಕಾಣಿಕೆ ನೀಡಿರುವ ಈ ಜಿಲ್ಲೆಯು ಸುಪ್ರಸಿದ್ಧ ಧಾರ್ಮಿಕ ಕೇಂದ್ರಸ್ಥಾನವೂ ಹೌದು. ಸಾಹಿತ್ಯ ಕ್ಷೇತ್ರದಲ್ಲಿ ಮುಂದಿರುವುದು ಸರ್ವವೇದ್ಯ. ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕುಂಭಾಶಿ ಶ್ರೀ ಗಣಪತಿ, ಕಾಪು-ಮಲ್ಪೆ-ಮರವಂತೆಯ ಕಡಲ ಕಿನಾರೆ, ಸೈಂಟ್ ಮೆರಿಸ್ ದ್ವೀಪ, ಕಾರ್ಕಳದ ಗೋಮ್ಮಟೇಶ್ವರ, ಚತುರ್ಮುಖ ಬಸದಿ, ಅತ್ತೂರು ಚರ್ಚ್, ಸೋಮೇಶ್ವರದ ವನ್ಯಜೀವಿಧಾಮ, ಪ್ರಕೃತಿಯ ರಮ್ಯತಾಣವೆನಿಸಿದ ಆಗುಂಬೆಗಳಂತಹ ಪ್ರೇಕ್ಷಣೀಯ ಸ್ಥಳಗಳು ದೇಶ-ವಿದೇಶಿಯರನ್ನು ಕೈಬೀಸಿ ಕರೆಯುತ್ತಿದೆ.
ಉಡುಪಿ ಜಿಲ್ಲೆಯ ಪ್ರಕೃತಿ ಸೌಂದರ್ಯದ ಹಚ್ಚಹಸುರಿನ ಗಿರಿಬೆಟ್ಟಗಳ ತಪ್ಪಲಿನ, ಸದಾ ತಂಪಾಗಿರುವ ತಾಲೂಕು ಕಾರ್ಕಳ. ಇತಿಹಾಸ ಪ್ರಸಿದ್ಧವಾದ ಕೋಟೆ ಕೊತ್ತಲಗಳಿಂದ ಗುಡಿಗೋಪುರ ಬಸದಿಗಳಿಂದ ಕೂಡಿ ಭೈರವಾರಸರ ರಾಜಧಾನಿಯಾಗಿ ಜೈನ ಇತಿಹಾಸ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ತಾಣವೇ ಕಾರ್ಕಳ.
ಕರಾವಳಿ ಜಿಲ್ಲೆಗೆ ಸೇರಿದ್ದರೂ, ಸಹ್ಯಾದ್ರಿಯ ಸೆರಗಿನೊಳಗಿರುವ ಇದಕ್ಕೆ ಮಲೆನಾಡಿನ ಸೌಂದರ್ಯ, ಸದಾ ಹಸಿರಿನ ಸೆರಗನ್ನು ಹೊದ್ದಿರುವ ಇಲ್ಲಿನ ಗಿರಿಕಂದರಗಳೆಡಿಯಲ್ಲಿ ಹುಟ್ಟಿ ಹರಿದೋಡುವ ನದಿ-ತೊರೆಗಳ ಸಂಖ್ಯೆ ಅಪಾರ. ಇಲ್ಲಿ ಹುಟ್ಟಿದ ಸೀತಾ, ಶಾಂಭವೀ, ಮಡಿಸಾಲು, ಸ್ವರ್ಣ ನದಿಗಳು ಇತಿಹಾಸ ನಿರ್ಮಿಸಿವೆ. ಶಿಲಾಯುಗದ ಕುರುಹುಗಳು ಬೆಳ್ಮಣ್, ಕಡಂದಲೆ, ವರಂಗ ಶಾಸನಗಳು ಕಾರ್ಕಳದ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲಿವೆ.
ಶ್ರೇಷ್ಟಮಟ್ಟದ ಕರಿಕಲ್ಲುಗಳಿಂದ ಕೂಡಿದ ಶಿಲೆಗಳ ನಾಡೇ ಕಾರ್ಕಳವಾಗಿ, ಜನಮನದಲ್ಲಿ ಸ್ಥಾನವನ್ನು ಭದ್ರಗೊಳಿಸಿದೆ. ಕಾರ್ಕಳದ ಬಂಡೆಯ ಮೇಲೆ ವಿರಾಜಮಾನವಾದ ಭವ್ಯ ಏಕ ಶಿಲಾ ವಿಗ್ರಹ ಗೊಮ್ಮಟೇಶ್ವರ,



ಚತುರ್ಮುಖ ಬಸದಿ


ಕಾರ್ಕಳ ಪಡುತಿರುಪತಿ ಶ್ರಿ ವೆಂಕಟರಮಣ ದೇವಸ್ಥಾನ





  ಅತ್ತೂರು ಸಂತ ಲಾರೆನ್ಸ್ ಚರ್ಚ್



ಹಿರಿಯಂಗಡಿ ಬಸದಿ



ಹಚ್ಚಹಸಿರಿನ ನಡುವೆ ದಾರಿಯ ಪಯಣ

ಕಾರ್ಕಳದ ಆನೆಕೆರೆ ಬಸದಿ

ವರಂಗದ ಕೆರೆ ಬಸದಿ



ಕೊಡಚಾದ್ರಿಯ ಗಿರಿ ಶಿಖರ


ಕೂಡ್ಲು ತೀರ್ಥ ಫಾಲ್ಸ್

ಸೀತಾನದಿ ನಿಸರ್ಗಧಾನ


 ರಾಮಸಮುದ್ರ, ಪಡುತಿರುಪತಿ, ಖ್ಯಾತಿಯ ವೆಂಕಟರಮಣ ದೇವಸ್ಥಾನ, ಸರ್ವಧರ್ಮ ಸಮಭಾವದ ಪವಿತ್ರ ಕ್ಷೇತ್ರ ಅತ್ತೂರು ಸಂತ ಲಾರೆನ್ಸ್ ಚರ್ಚ್, ಪ್ರಾಚೀನ ಜಾಮಿಯಾ ಮಸೀದಿ, ವರಂಗದ ಜೈನ ಕೆರೆ ಬಸದಿ ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನೊಳಗೊಂಡ ಒಟ್ಟು ವಿಸ್ತೀರ್ಣದಲ್ಲಿ ¾ ಭಾಗ ಕಾಡು, ¼ ಭಾಗ ಕೃಷಿ ಭೂಮಿಯನ್ನು ಹೊಂದಿದ ತಾಲೂಕು ಕಾರ್ಕಳ. ಕೂಡ್ಲು ತೀರ್ಥ, ಜೋಮ್ಲು ತೀರ್ಥ, ಸೋಮೇಶ್ವರ ಅಭಯಾರಣ್ಯ, ಕಣ್ಮನ ತಣಿಸುವ ಾಗುಂಬೆಯ ತಪ್ಪಲು, ಪಶ್ಚಿಮಘಟ್ಟಗಳ ನಯನ ಮನೋಹರ ದೃಶ್ಯಗಳು ಮುದ ನೀಡುತ್ತಿವೆ.
ಕಾರ್ಕಳ ತಾಲೂಕಿನಲ್ಲಿ ಒಟ್ಟು 50 ಗ್ರಾಮಗಳಿದ್ದು, ನಾಡ್ಪಾಲು ಗ್ರಾಮ ವಿಸ್ತೀರ್ಣದಲ್ಲಿ ರಾಜ್ಯದಲ್ಲೇ ಆಗ್ರೇಸರವಾಗಿದೆ. ಶಿಲೆಕಲ್ಲುಗಳ ಉದ್ಯಮ, ಶಿಲ್ಪಕೆತ್ತನೆ, ಗೋಡಂಬಿ ಬೀಜ ಸಂಸ್ಕರಣೆ ಹಾಗೂ ಅಕ್ಕಿಗಿರಣಿಗಳು ತಾಲೂಕಿನ ಪ್ರಮುಖ ಉದ್ಯಮವಾಗಿದೆ. ನಿಟ್ಟೆಯ ಲೆಮಿನಾ ಬೃಹತ್ ಉದ್ಯಮವಾಗಿದೆ.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ರಸ್ತೆ ಸಂಪರ್ಕ, ಕುಡಿಯುವ ನೀರು, ವಿದ್ಯುತ್ಛಕ್ತಿ ಒದಗಿಸುವುದು, ಅಲ್ಲದೆ ಕಡ್ಡಾಯ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದು, ಕಾರ್ಕಳ ಸಂಪೂರ್ಣ ಸಾಕ್ಷರ ತಾಲೂಕೆಂದು 1990 ರಲ್ಲಿಯೇ ಘೋಷಿಸಲ್ಪಟ್ಟಿದೆ. ಚದುರ ಚಂದ್ರಮ ಹಾಗೂ ಕವಿ ಮುದ್ದಣರವರ ತವರೂರು ಈ ಕಾರ್ಕಳ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ೊಟ್ಟು ನೀಡಿ, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಾಮಾಜಿಕ ರಂಗದಲ್ಲಿ ತನ್ನ ವೈಶಿಷ್ಟ್ಯತೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಸರ್ವಧರ್ಮ ಸಮಭಾವದೊಂದಿಗೆ ರಾಷ್ಟ್ರೀಯ ಭಾವೈಕ್ಯತೆಯ ಪ್ರತೀಕವಾಗಿ ಪ್ರತೀಕವಾಗಿ ಪ್ರಗತಿಯತ್ತ ಧಾವಿಸುತ್ತಿದೆ.

No comments:

Post a Comment

ನಿಮ್ಮ ಅನಿಸಿಕೆಗಳನ್ನು ದಾಖಲಿಸಿ